Youth: ಮಿಸರಿ ಹುಳು ರಕ್ಷಣೆ ಮಾಡಿದ ಶಿವಮೊಗ್ಗ ಯುವಕ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದೇವಿಮನೆ ಘಟ್ಟ ಭಾಗದ ಕುಮಟಾ – ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಡಿತಗೊಳ್ಳುತ್ತಿರುವ ಮರಗಳಲ್ಲಿ ಇದ್ದ ಮಿಸರಿ ಹುಳುಗಳನ್ನು (ಸ್ಟಿಂಗ್ಲೆಸ್ ಬೀ) ರಕ್ಷಣೆ ಮಾಡಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನಲೆಯಿಂದ ಯುವಕನೊಬ್ಬ 90 ಕಿಲೋಮೀಟರ್ ಪ್ರಯಾಣ ಬೆಳೆಸಿ ಅವುಗಳ ರಕ್ಷಣೆ ಮಾಡುತಿದ್ದಾರೆ. ಗುರುಪ್ರಸಾದ್ ಕಾನಲೆ ಅಳಿವಿನಂಚಿನಲ್ಲಿದ್ದ ಮಿಸರಿಗೆ ನೆಲೆ ಕಲ್ಪಿಸಿದ ಸಂರಕ್ಷಕ. ಇವುಗಳ ರಕ್ಷಣೆಗಾಗಿ ಅವರು ಕಾನಲೆಯಿಂದ ಶಿರಸಿ ತಾಲೂಕಿನ ಬಂಡಲ್ ಸಮೀಪದವರೆಗೆ ಎರಡು ತಾಸಿನಲ್ಲಿ 90 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ.
ಜೇನು ಮತ್ತು ಮಿಸರಿ ಹುಳುಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ಕೃಷಿ ಕಾಯಕದಲ್ಲಿರುವ ಇವರು ಫೇಸ್ ಬುಕ್ ವೀಕ್ಷಿಸುತ್ತಿರುವಾಗ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನಲ್ಲಿರುವ ಮಿಸರಿ ಹುಳುಗಳ ಆವಾಸ ಸ್ಥಳಗಳು ಹೆದ್ದಾರಿ ಅಗಲೀಕರಣ ಕಾರಣದಿಂದ ನಶಿಸುತ್ತಿದೆ ಎಂದು ಗಣೇಶ ಹೊಸ್ಮನೆ ಎಂಬುವವರ ಫೇಸ್ಬುಕ್ ಪೋಸ್ಟ್ ನೋಡಿದ ಇವರು ಹುಳುಗಳ ರಕ್ಷಣೆಗೆ ಮುಂದಾದರು.
ಹೆದ್ದಾರಿ ವಿಸ್ತರಣೆಗಾಗಿ ಕಳೆದ ಎರಡು ದಿನದಿಂದ ಹಲವು ಮರಗಳಿಗೆ ಕೊಡಲಿ ಏಟು ಬಿದ್ದಿತ್ತು. ಈ ಪೈಕಿ ನಾಲ್ಕಾರು ಮರಗಳಲ್ಲಿ ವಾಸವಿದ್ದ ಮಿಸರಿ ಹುಳುಗಳು ನೆಲೆ ಕಳೆದುಕೊಂಡಿದ್ದರಿಂದ ಚೆಲ್ಲಾಪಿಲ್ಲಿಯಾಗಿ ಹಾರಲಾರಂಭಿಸಿದ್ದವು. ನೂರಾರು ಮರಿಗಳು ಸತ್ತಿದ್ದವು. ಮೊಟ್ಟೆಗಳು ಇರುವೆ,ಓತಿಕ್ಯಾತದ ಪಾಲಾಗುತ್ತಿದ್ದವು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಮಿಸರಿಗಳಿಗೆ ಗುರುಪ್ರಸಾದ ಆಸರೆಯಾದರು.
ಮಿಸರಿ ಹುಳುಗಳು ಎಂದರೇನು ?
ಮಿಸರಿ ಅಥವಾ ನಿಸರಿ ಹುಳುಗಳು ಜೇನು ಜಾತಿಗೆ ಸೇರಿದ ಹುಳುಗಳಾಗಿದ್ದು, ಮರಗಳ ಪೊಟರೆಗಳಲ್ಲಿ ಗೂಡು ಕಟ್ಟಿ ಜೇನು ಮಾದರಿಯಲ್ಲಿ ಸಿಹಿಯಾದ ತುಪ್ಪ ಸಿದ್ಧಪಡಿಸುತ್ತವೆ. ಜೇನುತುಪ್ಪದಂತೆ ಇರುವ ಇವು ಔಷಧಗಳಿಗೆ ಬಳಕೆಯಾಗುತ್ತವೆ. ಇವು ಜೇನಿನಂತೆ ಕಚ್ಚುವುದಿಲ್ಲ.ಅತೀ ಚಿಕ್ಕದಾಗಿರುವ ಇವು ಪಶ್ವಿಮ ಘಟ್ಟದಲ್ಲಿ ಹೆಚ್ಚು ನೆಲೆ ಕಂಡುಕೊಂಡಿವೆ.
ಇನ್ನು ಇವುಗಳ ರಟ್ಟು ಹಿಂಡಿ ತುಪ್ಪ ತೆಗೆದ ಬಳಿಕ ಅವುಗಳಿಂದ ಸಿದ್ಧಪಡಿಸುವ ಅಂಟು ಪೀಠೋಪಕರಣಗಳ ಪಾಲಿಷ್ ಗೆ ಬಳಕೆಯಾಗುತ್ತದೆ. ಇವುಗಳು ಜೇನಿನಂತೆ ಬಹುಬೇಗ ತುಪ್ಪ ಸಂಗ್ರಹ ಮಾಡುವುದಿಲ್ಲ. ಹೆಚ್ಚು ಸಮಯ ತುಪ್ಪ ಸಂಗ್ರಹಕ್ಕೆ ತೆಗೆದುಕೊಳ್ಳುತ್ತವೆ. ಈ ಹಿಂದೆ ವೈದ್ಯ ಶಾಸ್ತ್ರದಲ್ಲೂ ಕೂಡ ಮಿಸರಿ ಜೇನಿನ ಬಗ್ಗೆ ಉಲ್ಲೇಖ ಮಾಡಲಾಗಿದೆ. ಜೇನು ಕೃಷಿಗೆ ಹೋಲಿಸಿದರೆ ಮಿಸರಿ ಕೃಷಿ ಲಾಭದಾಯಕವಾಗಿಲ್ಲ.ಹೀಗಾಗಿ ಇವುಗಳ ಸಾಕಾಣಿಕೆ ಕಡಿಮೆ ಇದೆ.
ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿದ್ದ ಮಿಸರಿ ಹುಳುಗಳ ಸಂತತಿ ಈಚಿನ ವರ್ಷದಲ್ಲಿ ಹವಾಮಾನ ವೈಪರೀತ್ಯ,ಪರಿಸರ ನಾಶದಿಂದ ಇಳಿಮುಖಗೊಳ್ಳುತ್ತಿವೆ.ಜೇನಿನಂತೆ ಇವುಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದರ ಜೊತೆಗೆ ಪರಿಸರ ಸಮತೋಲನ ಕಾಪಾಡುವ ಇಂತಹ ಜೀವಿಗಳ ರಕ್ಷಣೆ,ಪೋಷಣೆಯ ಅಗತ್ಯ ಸಹ ಇದ್ದು,ಜೇನು ಪ್ರೇಮಿ ಗುರುಪ್ರಸಾದ್ ಕಾರ್ಯ ಶ್ಲಾಘನೀಯವಾಗಿದೆ.