ಬೆಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಕಲಬುರ್ಗಿ ಖಾಕಿ ಪಡೆ
ಕಲಬುರಗಿ: ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಭೀಕರ ಕೊಲೆಯ ನಂತರ ಪೊಲೀಸರು ಎಚ್ಚೆತ್ತಿದ್ದು, ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ರೌಡಿಗಳನ್ನು ಕರೆತಂದು ಪರೆಡ್ ನಡೆಸುವ ಮೂಲಕ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡಿಸಿಪಿ ಆಡೂರು ಶ್ರೀನಿವಾಸುಲು ನೇತೃತ್ವದಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ನಸುಕಿನ ಜಾವವೇ ಐವತ್ತಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಗಳಲ್ಲಿ ಮಾರಕಾಸ್ತ್ರ ಇಟ್ಟಿರುವ ಅನುಮಾನದ ಹಿನ್ನಲೆ ಮನೆಗಳನ್ನು ಸರ್ಚ್ ಮಾಡಿದ್ದಾರೆ. ನಂತರ ಅಪರಾಧ ಕೃತ್ಯಗಳಲ್ಲಿ ಕ್ರಿಯಾಶೀಲರಾಗಿರುವ ರೌಡಿಗಳನ್ನು ಡಿಎಆರ್ ಮೈಧಾನಕ್ಕೆ ಕರೆತಂದು ಪರೇಡ್ ಮಾಡಿಸಿ ಬಾಲ್ ಬಿಚ್ಚದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾಲಾ ಮುದುಡಿಕೊಂಡು ನಾವಾಯ್ತು ನಮ್ಮ ಕೆಲಸ ಆಯ್ತು ಅಂತ ಜೀವನ ನಡೆಸಬೇಕು. ಅದೇಲ್ಲಾ ಬಿಟ್ಟು ಶಾಂತಿ ಕದಡುವ ಕೆಲಸ ಮಾಡುವದು, ಜನ ಸಾಮಾನ್ಯರಿಗೆ ಭಯ ಹುಟ್ಟಿಸುವ ಕೆಲಸ ಮಾಡುವದು, ರೌಡಿಜಂ ಮಾಡುವದು ಸೇರಿದಂತೆ ಸಮಾಜ ಘಾತುಕ ಕೆಲಸಗಳಲ್ಲಿ ಆ್ಯಕ್ಟಿವ್ ಆಗಿರೋದು ಕಂಡು ಬಂದರೆ ಗಡಿಪಾರು ಮಾಡುವದಾಗಿ ಎಚ್ಚರಿಕೆ ನೀಡಿದರು. ನಮ್ಮ ಪೊಲೀಸರು ಸದಾ ಒಂದು ಕಣ್ಣು ನಿಮ್ಮ ಮೇಲೆ ಇಟ್ಟಿರ್ತಾರೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವದು ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ರೌಡಿಗಳಿಗೆ ಡಿಸಿಪಿ ಆಡೂರು ಶ್ರೀನಿವಾಸಲು ಎಚ್ಚರಿಕೆ ನೀಡಿದರು.
ಕಳೆದೆ ಕೆಲ ದಿನಗಳಿಂದ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಸತತ ಕೊಲೆಗಳು ನಡೆಯುತ್ತಿವೆ. ನಗರದಲ್ಲಿ ಜನ ಭಯಭೀತರಾಗಿದ್ದಾರೆ. ಎರಡು ದಿನಗಳ ಹಿಂದೆ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರ ಎದುರಿಗೆ ಅಭಿಷೇಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ಖಾಕಿ ಪಡೆ ರೌಡಿಗಳಿಗೆ ಚುರುಕು ಮುಟ್ಟಿಸಿದ್ದಾರೆ.