ಮೈಸೂರು ಜಿಲ್ಲೆ ಭೂ ಅಕ್ರಮ ತನಿಖೆಗೆ ಕಾಲಾವಕಾಶ ಕೋರಿ ಸರ್ಕಾರಕ್ಕೆ ಡಿಸಿ ಪತ್ರ
ಮೈಸೂರು : ಮೈಸೂರು ಜಿಲ್ಲೆಯಲ್ಲಿನ ಭೂ ಅಕ್ರಮಗಳ ತನಿಖೆ ನಡೆಸಲು 4 ತಿಂಗಳು ಕಾಲಾವಕಾಶ ಕೋರಿ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿನ ಭೂ ಒತ್ತುವರಿ ಸಂಬಂಧ ಸಮಗ್ರ ತನಿಖೆ ನಡೆಯಬೇಕಿದೆ. ಸಂಬಂಧಪಟ್ಟವರಿಗೆ ತಿಳಿವಳಿಕೆ ನೋಟಿಸ್ ನೀಡಬೇಕು. ಜಂಟಿ ಸರ್ವೇ ಮೂಲಕ ಭೂಮಿ ಅಳತೆ ಮಾಡಬೇಕು. ಪ್ರತಿ ಹಂತದಲ್ಲೂ ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಭೂ ಮಾಪನ ಇಲಾಖೆ ಸಮನ್ವಯ ಅಗತ್ಯವಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮೈಸೂರು ತಾಲೂಕಿನ ಕೇರ್ಗಳ್ಳಿ, ದಟ್ಟಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮದ ಬಗ್ಗೆ ಹಿಂದಿನ ಡಿಸಿ ರೋಹಿಣಿ ಸಿಂಧೂರಿಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಭೂ ಅಕ್ರಮಗಳ ತನಿಖೆಗೆ 21 ದಿನಗಳಲ್ಲಿ ಗಡುವು ರಾಜ್ಯ ಸರ್ಕಾರ
ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಕಾಲಾವಕಾಶ ಕೇಳಿದ್ದಾರೆ. ಡಾ.ಬಗಾದಿ ಗೌತಮ್.
ಜಯಪುರ ಹೋಬಳಿಯ ಯಡಹಳ್ಳಿ ಸರ್ವೇ ನಂ.69,72,72/1,2 ಹಾಗೂ 71/1, ದಟ್ಟಗಳ್ಳಿ ಗ್ರಾಮದ ಸ.ನಂ.130/3ರಲ್ಲಿ ಸೇರಿರುವ ಸ.ನಂ.98,131,132, ಲಿಂಗಾಂಬುಧಿ ಸ.ನಂ.123 ಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಜಮೀನಿನಲ್ಲಿ ಒತ್ತುವರಿಯಾಗಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿತ್ತು.
ಕಂದಾಯ ಇಲಾಖೆಯು ತನಿಖೆ ನಡೆಸಲು ತುಮಕೂರು, ಮಂಡ್ಯ ಹಾಗೂ ದಾವಣಗೆರೆಯ ಭೂ ದಾಖಲೆಗಳ ಉಪನಿರ್ದೇಶಕರ ತಂಡ ರಚನೆ ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಆಗಸ್ಟ್ 30ರಂದು ಆದೇಶ ಹೊರಡಿಸಿತು.
ಆದರೆ, ಶಾಸಕ ಸಾ ರಾ ಮಹೇಶ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸರ್ಕಾರಕ್ಕೆ ಪತ್ರ ಬರೆದಿದ್ದರು. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಮಂಡ್ಯ,ತುಮಕೂರು ಹಾಗೂ ದಾವಣಗೆರೆಯ ಭೂ ದಾಖಲೆಗಳ ಉಪನಿರ್ದೇಶಕ ತಂಡ ಕೈಬಿಟ್ಟು, ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರ ಹೆಗಲಿಗೆ ಹಾಕಿತು.
ಅಕ್ರಮ ಒತ್ತುವರಿ ಬಗ್ಗೆ ತನಿಖೆ ನಡೆಸಲು ತಂಡ ರಚನೆ ಮಾಡಿರುವ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರು, ದಸರಾ ಹಾಗೂ ಕೋವಿಡ್ ತುರ್ತು ಕಾರ್ಯಗಳು ಇರುವುದರಿಂದ ಕಾಲಮಿತಿ ವಿಸ್ತರಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಜಿಲ್ಲಾಧಿಕಾರಿ ಗೌತಮ್ ಬಗಾದಿಯವರು ಮನವಿ ಮಾಡಿದ್ದಾರೆ.