ಶಿರಸಿ ಚಿನ್ನದಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಆಭರಣ ಕಳ್ಳತನ; 4 ಲಕ್ಷ ರೂ.ಮೌಲ್ಯದ ಸ್ವತ್ತುಗಳು ವಶ
ಕಾರವಾರ : ಸೆಪ್ಟೆಂಬರ್,17 ರಂದು ಶಿರಸಿ ನಗರದ ರತ್ನದೀಪ ಜ್ಯುವೆಲರ್ಸ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳವಾಗಿಯ ನಾವೇಕರಗಲ್ಲಿಯ ನಿಲೇಶ ರೇವಣಕರ (32) ಹಾಗೂ ಕಾರವಾರದ ಹಬ್ಬುವಾಡದ ರಾಘವೇಂದ್ರ ದೈವಜ್ಞ (35) ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಒಂದನೇ ಆರೋಪಿ ನಿಲೇಶ್ ರತ್ನದೀಪ ಜ್ಯುವೆಲರ್ಸನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು, ಚಿನ್ನದ ಸರವನ್ನು ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದ.ಇದು ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಬಂಧಿತ ಆರೋಪಿಗಳಿಂದ ಪೊಲೀಸರು 22.28 ಗ್ರಾಂ.ತೂಕದ ಬಂಗಾರದ ಎರಡು ಸರ ಹಾಗೂ ಮಾರುತಿ ಸ್ವಿಪ್ಟ್ ಕಾರು ಸೇರಿ ಒಟ್ಟೂ 4 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಡಿ.ವೈ.ಎಸ್.ಪಿ.ರವಿ ನಾಯ್ಕ ಅವರ ಮಾರ್ಗದರ್ಶನಲ್ಲಿ ಪಿಎಸ್ಐ ರಾಜಕುಮಾರ,ಪಿಎಸ್ಐ ಮೋಹಿನಿ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಚೇತನ್ ಕುಮಾರ್,ಕೊಟೇಶ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.