ದಾಯಾದಿ ಕಲಹದಲ್ಲಿ ಗುಂಡೇಟಿಗೆ ಓರ್ವ ಬಲಿ : ಮಹಿಳೆ ಸ್ಥಿತಿ ಚಿಂತಾಜನಕ – ಕೊಲೆಗಾರ ಕೆರೆಗೆ ಹಾರಿ ಆತ್ಮಹತ್ಯೆ
ಕೊಡಗು : ದಾಯಾದಿ ಕಲಹ ವಿಕೋಪಕ್ಕೆ ತೆರಳಿದ ಪರಿಣಾಮ ಓರ್ವ ಗುಂಡೇಟಿಗೆ ಬಲಿಯಾಗಿದ್ದರೆ, ಹತ್ಯೆ ಮಾಡಿದಾತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವತಃ ಹಂತಕ ಪತಿ ಹಾರಿಸಿದ ಗುಂಡಿಗೆ ಮಹಿಳೆಯೊಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಕ್ಷಿಣ ಕೊಡಗಿನ ಕಿರಗೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ದಸರಾ ದಿನದಂದೇ ಗುಂಡೇಟು ಮೊಳಗಿ ಧಾರುಣ ಘಟನೆ ನಡೆದಿರುವುದರಿಂದ ಇಡೀ ಗ್ರಾಮವೇ ಸೂತಕದ ಛಾಯೆಯಲ್ಲಿ ಮುಳುಗಿದೆ. ಅಲೆಮಾಡ ಸೋಮಯ್ಯ ಸಾಗರ್ ಎಂಬಾತ ಐನ್ ಮನೆಯಲ್ಲಿ ತನ್ನ ಚಿಕ್ಕಪ್ಪನ ಮಗನಾದ ಮಧು ಎಂಬಾತನೊಂದಿಗೆ ಅಡಿಕೆ ಫಸಲಿನ ವಿಚಾರಕ್ಕೆ ತಗಾದೆ ತೆಗೆದಿದ್ದಾನೆ. ಮಾತಿಗೆ ಮಾತು ವಿಕೋಪಕ್ಕೆ ತೆರಳಿದಾಗ ಕೋವಿಯಿಂದ ಮಧುವಿನ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡೇಟಿನಿಂದ ಮಧು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ. ತಡೆಯಲು ಹೋದ ಸಾಗರ್ ನ ಪತ್ನಿ ಯಶೋಧಾರವರಿಗೆ ಗುಂಡೇಟು ತಗಲಿ ಚಿಂತಾಜನಕರಾಗಿದ್ದು, ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಬಳಿಕ ಆರೋಪಿ ಸಾಗರ್ ಮನೆ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.