ಪಟಾಕಿ ತರಲೆಂದು ಅಂಗಡಿಗೆ ಹೋದ ಬಾಲಕನ ಅಪಹರಿಸಿ ಹತ್ಯೆ
ಮೈಸೂರು : ಪಟಾಕಿ ತರಲೆಂದು ಅಂಗಡಿಗೆ ಹೋಗಿದ್ದ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಗುರುತು ಪತ್ತೆಯಾಗುತ್ತೆ ಎಂಬ ಭೀತಿಯಲ್ಲಿ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡಿನಲ್ಲಿ ಈ ಘಟನೆ ನಡೆದಿದ್ದು, ಹನಗೋಡು ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್ರ ಪುತ್ರ ಕಾರ್ತಿಕ್ (9) ಮೃತ ಬಾಲಕ. ಮನೆಯ ಬಳಿ ಆಟವಾಡುತ್ತಿದ್ದ ಬಾಲಕ ಕಾರ್ತಿಕ್ನನ್ನು ದುಷ್ಕರ್ಮಿಗಳು ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ ಬಾಲಕನನ್ನು ಅಪಹರಿಸಿದ್ದಾರೆ. ಮನೆ ಮುಂದೆ ಇದ್ದ ಬಾಲಕ ಕಣ್ಮರೆಯಾದಾಗ ಪೋಷಕರು ಕಾರ್ತಿಕ್ನನ್ನು ಹುಡುಕಾಡಿದ್ದಾರೆ.
ಆ ವೇಳೆ ಬಾಲಕನ ತಂದೆ ನಾಗರಾಜ್ಗೆ ಕರೆ ಮಾಡಿದ ಅಪಹರಣಕಾರರು 4 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಇನ್ನಷ್ಟು ಆತಂಕಗೊಂಡ ಪೋಷಕರು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಎಸ್.ಪಿ. ಚೇತನ್, ಎಎಸ್ ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ರವಿಪ್ರಸಾದ್ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ಗಳಾದ ಚಿಕ್ಕಸ್ವಾಮಿ, ರವಿ, ರವಿಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಮೊಬೈಲ್ ಕರೆ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿಯೊಬ್ಬ ಬಾಲಕನನ್ನು ಹತ್ಯೆ ಮಾಡಿ, ಕುಂಟೇರಿ ಕೆರೆಯ ಬಯಲಿನ ಹಳ್ಳದಲ್ಲಿ ಶವವನ್ನು ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಸ್ಥಳಕ್ಕೆ ಎಸ್ಪಿ ಚೇತನ್, ಡಿವೈಎಸ್ ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ ವೇಳೆ ಬಾಲಕನ ಶವ ಪತ್ತೆಯಾಗಿದೆ. ಶವವನ್ನು ಮೈಸೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹುಣಸೂರಿನಲ್ಲಿ ಈ ಹಿಂದೆಯೂ ಇಬ್ಬರು ಬಾಲಕರನ್ನು ಹಣಕ್ಕಾಗಿ ಅಪಹರಿಸಿವ ಹತ್ಯೆ ಮಾಡಲಾಗಿತ್ತು. ಈಗ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ. ಈಗಲಾದರೂ ಪೊಲೀಸರು ಇಂತಹ ಮಕ್ಕಳ ಅಪಹರಣಕಾರರು ಮತ್ತು ಈ ಪ್ರಕರಣದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದವರನ್ನ ಹೆಡೆಮುರಿ ಕಟ್ಟಬೇಕಿದೆ.