ಹಿಂದೂಗಳ ಭಾವನೆಗಳಿಗೆ ಧಕ್ಕೆ : ಅಮೀರ್ ಖಾನ್ ನಟಿಸಿರುವ ಸಿಯೆಟ್ ಜಾಹೀರಾತು ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಆಕ್ರೋಶ
ಕಾರವಾರ: ಸಿಯೆಟ್ ಟೈರ್ ಜಾಹೀರಾತಿನಲ್ಲಿ ಹಿಂದೂಗಳ ಹಬ್ಬಗಳನ್ನು ಟೀಕಿಸಿ ಹಿಂದೂಗಳ ಭಾವನೆಯನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಸದ ಅನಂತಕುಮಾರ್ ಹೆಗಡೆ ಸಿಯೆಟ್ ಟೈರ್ ಕಂಪನಿ ಮಾಲೀಕ ಅನಂತ ವರ್ಧನ್ ಅವರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಯೆಟ್ ಜಾಹೀರಾತಿನಲ್ಲಿ ಹಿಂದೂಗಳ ಆಚರಣೆಗಳನ್ನು ನಟ ಅಮೀರ್ ಖಾನ್ ಹೀಯಾಳಿಸಿರುವ ಕುರಿತು ವಿರೋಧ ವ್ಯಕ್ತಪಡಿಸಿ ಉಲ್ಲೇಖಿಸಿರುವ ಅವರು ಈ ಜಾಹೀರಾತಿನಲ್ಲಿ ಹಿಂದೂಗಳ ಭಾವನೆಯನ್ನು ತುಳಿಯುವ ಕ್ಷುಲ್ಲಕ ಕುತಂತ್ರ ಎಂದು ಆರೋಪಿಸಿದ್ದು, ಆಮೀರ್ ಖಾನ್ ನಟಿಸಿರುವ ಜಾಹೀರಾತಿನಲ್ಲಿ ಹಿಂದೂಗಳು ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಅಮೀರ್ ಖಾನ್ ರವರ ಪರಿಸರ, ಪ್ರಾಣಿಗಳ ಕಾಳಜಿಗೆ ನನ್ನ ಮೆಚ್ಚುಗೆ ಇದೆ. ಆದರೆ ಅಮೀರ್ ಖಾನ್ ಪ್ರತಿಪಾದಿಸುವ ಮುಸ್ಲಿಂ ಧರ್ಮದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು, ಬೆಳಿಗ್ಗೆ ದ್ವನಿವರ್ಧಕ ಬಳಸುವುದರ ಬಗ್ಗೆ ಏಕೆ ಮೌನ ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ಭಾವನೆಗಳನ್ನು ತುಳಿಯುವ ಕೆಲಸವಾಗಿದೆ ಎಂದು ಆರೋಪಿಸಿ ಪತ್ರ ಬರೆದಿದ್ದು, ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ ಸಂಸದ ಅನಂತಕುಮಾರ್ ಹೆಗಡೆ ಹಂಚಿಕೊಂಡ ವಿವರ ಹೀಗಿದೆ :
ಹಿಂದೂಗಳ ಆಚರಣೆಗಳನ್ನು ಹೀಯಾಳಿಸುವುದೊಂದೆ ಇವರ ಕೆಲಸವೇ…
ಪರಿಸರವಾದಿ,ಪ್ರಾಣಿಪ್ರೇಮಿ ಆಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದೂಗಳಿಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ.ಅವರು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ ಇದೆ.
ಅದರಂತೆ ಅನ್ಯಧರ್ಮಗಳಲ್ಲಿ (ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ.
ಪ್ರತಿದಿನ ಬೆಳಿಗ್ಗೆ ಚೀರುವ ಧ್ವನಿವರ್ಧಕಗಳು,ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ….
ಅಂದಹಾಗೆ ಈ ರೀತಿಯ ಜಾಹೀರಾತುಗಳು ಹಿಂದೂಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲಕ ಕುತಂತ್ರವಲ್ಲದೆ ಮತ್ತೇನೂ ಆಗಿರುವುದಿಲ್ಲ. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ಕಲಾವಿದರಿಗೇನು ಕಡಿಮೆ ಯಿಲ್ಲ.
ಈ ಜಾಹೀರಾತನ್ನು ಅನಂತ ವರಧನ್ ಗೋಯೆಂಕಾ ಮಾಲೀಕತ್ವದ CEAT ಸಂಸ್ಥೆಯು ಪ್ರಸ್ತುತ ಪಡಿಸಿದ್ದು,ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿ ಆಗ್ರಹ ಎಂದು ಬರೆದುಕೊಂಡಿದ್ದಾರೆ.