ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ: ಸಚಿವ ಬಿ ಸಿ ಪಾಟೀಲ್
ಧಾರವಾಡ : ಹಾನಗಲ್ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಕ್ಷೇತ್ರದಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ನೀಡಬೇಕು ಎಂದು ಪಕ್ಷದಿಂದ ನಿರ್ದೇಶನ ನೀಡಲಾಗಿದ್ದು, ಪಕ್ಷದ ನಿರ್ದೇಶನ ಮೇರೆಗೆ ಸಭೆಯಲ್ಲಿ ಯಾರು ಯಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅವರ ಅರ್ಜಿಗಳನ್ನು ಸ್ವೀಕರಿಸಿ ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು. ಜೊತೆಗೆ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಗಲ್ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆಯುವ ಸಭೆಯಲ್ಲಿ ಮಾಹಿತಿ ಹಾಗೂ ಟಿಕೆಟ್ ಅಕಾಂಕ್ಷಿ ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕರಿಸಲಾಗುವುದು. ಬಳಿಕ ಅಭ್ಯರ್ಥಿಗಳ ಅರ್ಜಿ ಹಾಗೂ ಮಾಹಿತಿಗಳನ್ನು ಪಕ್ಷದ ಹೈಕಮಾಂಡಗೆ ಕಳುಹಿಸಿ ಕೋಡುತ್ತೇವೆ. ನಂತರ ಸೂಕ್ತ ಹಾಗೂ ಗೆಲ್ಲುವ ಅಭ್ಯರ್ಥಿಯನ್ನು ನಮ್ಮ ಪಕ್ಷದ ವರಿಷ್ಠರು ಘೋಷಣೆ ಮಾಡುತ್ತಾರೆ. ಹಾಗೇ ಘೋಷಣೆ ಮಾಡಿದ ಪಕ್ಷದ ಅಭ್ಯರ್ಥಿಗೆ ನಮ್ಮ ಬೆಂಬಲವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಕಳಪೆ ಬೀಜ ಕುರಿತು ಯಾವುದೇ ದೂರು ಬಂದಿಲ್ಲ.
ಬೆಳೆ ಪರಿಹಾರ ವಿಳಂಬ ಕುರಿತು ಮಾತನಾಡಿದ ಅವರು, 2021 ಬೆಳೆ ಪರಿಹಾರ ಅಷ್ಟೇ ಬಾಕಿ ಉಳಿದುಕೊಂಡಿದೆ. ಆದಷ್ಟು ಬೇಗ ಅದನ್ನು ಕೂಡಾ ಬಿಡುಗಡೆ ಮಾಡಲಾಗುವುದು. ನಾನು ಕೃಷಿ ಮಂತ್ರಿ ಆದ ಮೇಲೆ ಯಾವುದನ್ನೂ ಫೆಂಡಿಂಗ್ ಇಟ್ಟಿಲ್ಲ. ಎಲ್ಲ ಬಾಕಿ ಪರಿಹಾರವನ್ನು ಶೀಘ್ರವೆ ಬಿಡುಗಡೆ ಮಾಡಲಾಗುವುದು. ರೈತರಿಗೆ ಕಳಪೆ ಬೀಜ ನೀಡಲಾಗಿದೆ ಎಂಬುದರ ಕುರಿತು ಯಾವುದೇ ವರದಿ ಬಂದಿಲ್ಲ. ಔಷಧಿ ಸಿಂಪಡಣೆ ಮಾಡಿ ಬೆಳೆದ ಬೆಳೆಗಳು ಹೆಚ್ಚು ಇಳುವರಿ ನೀಡಿವೆ. ಅದೇ ರೀತಿ ಔಷಧಿ ಸಿಂಪಡಣೆ ಮಾಡದೇ ಇರುವ ಕಡೆ ಇಳುವರಿ ಕಡಿಮೆ ಬಂದಿದೆ. ಕಳಪೆ ಬೀಜ ಕುರಿತಾಗಿ ಯಾವ ವರದಿಯು ಬಂದಿಲ್ಲ ಎಂದರು.