ಹರಿಹರದಲ್ಲಿ ಭಾರೀ ಮಳೆ: ಸಾವಿರಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು…!
ದಾವಣಗೆರೆ: ಹರಿಹರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ 1 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರುನುಗ್ಗಿ, 20ಕ್ಕೂ ಅಧಿಕ ಮನೆಗಳು ಬಿದ್ದಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ನಿನ್ನೆ ರಾತ್ರಿ 7ಕ್ಕೆ ಆರಂಭವಾದ ಮಳೆ ರಾತ್ರಿ 11 ಗಂಟೆಯವರೆಗೂ ಎಡೆಬಿಡದೇ ಸುರಿಯಿತು. ಮಳೆಗೆ ಯಲವಟ್ಟಿ ತಾಂಡ ಸಂಪೂರ್ಣ ಜಲಮಯವಾಗಿದ್ದು, ಒಂದು ಹಸು ಸಾವನ್ನಪ್ಪಿದೆ. 300ಕ್ಕೂ ಅಧಿಕ ಮಂದಿಯನ್ನು ಸಮುದಾಯ ಭವನ, ದೇವಸ್ಥಾನಗಳಿಗೆ ರಾತ್ರೋರಾತ್ರಿ ತಹಶೀಲ್ದಾರ್ ರಾಮಚಂದ್ರಪ್ಪ, ಆರ್ ಐ ಆನಂದ್ ಸ್ಥಳಾಂತರಿಸಿದರು.
ಇನ್ನು ಕಮಲಾಪುರ ಗ್ರಾಮದಲ್ಲಿ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ 5 ಮನೆಗಳು ಗೋಡೆ ಬಿದ್ದಿವೆ.ರಾತ್ರಿ ಪೂರ್ತಿ ಗ್ರಾಮಸ್ಥರು ನೀರು ಹೊರಹಾಕಲು ಹರಸಾಹಸಪಡಬೇಕಾಯಿತು.
ಇನ್ನೂ ಹೆಚ್ಚಿನ ಅನಾಹುತ ಸಂಭವಿಸುವ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಯಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ.
“ಮಳೆ ಲೆಕ್ಕಿಸದೇ ಸುತ್ತಿದ ತಹಶೀಲ್ದಾರ್ ರಾಮಚಂದ್ರಪ್ಪ ಹಾಗೂ ಆರ್ ಐ ಆನಂದ್ ಅವರು ಮಳೆಯನ್ನೂ ಲೆಕ್ಕಿಸದೇ ರಾತ್ರಿಪೂರ ನೆಲಕಚ್ಚಿದ, ನೀರುನುಗ್ಗಿದ ಮನೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದರು.
ಮನೆ ಮಾಲೀಕರಿಗೆ ಸಾಂತ್ವನ ಹೇಳಿ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.ಈ ಸಂದರ್ಭ ಯಲವಟ್ಟಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯ ರಮೇಶ್ ಮತ್ತಿತರರಿದ್ದರು