ನಳಿನ್ ಕುಮಾರ್ ಕಟೀಲ್ ಒಬ್ಬ ಹುಚ್ಚ ಮೂರ್ಖರ ನಾಯಕ: ಎಂ. ಲಕ್ಷ್ಮಣ್
ಮೈಸೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಹುಚ್ಚ, ಮೂರ್ಖರ ನಾಯಕ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಎಂದು ಟೀಕಿಸಿದ್ದಾರೆ. ಕಟೀಲ್ ಆಯೋಗ್ಯ, ಅವಿವೇಕಿ, ಸಂಸ್ಕೃತಿ ಹೀನ ವ್ಯಕ್ತಿ. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡಿದ್ದ ನಳಿನ್ ಕುಮಾರ್ ಕಟೀಲ್, ತನ್ನ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಿದ್ದಾನೆ ಎಂದು ಏಕವಚನದಲ್ಲಿ ಹರಿಹಾಯ್ದರು. ಈ ಸಂಬಂಧ 2014 ರಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಎಂದರು.
ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಟೀಲ್, ಆ ಮಹಿಳೆಯ ಪತಿಯನ್ನು ಬ್ಲಾಕ್ ಮೇಲ್ ಮಾಡಿದ್ದರು. ವಿನಾಯಕ ಬಾಳಿಗ ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈನ ಖಾಸಾ ದೋಸ್ತ್ ಕಟೀಲ್. ಹತ್ಯೆ ಪ್ರಕರಣದಲ್ಲಿ ಅವರ ಕೈವಾಡವೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತಾಡಬೇಕು. ಕಾಂಗ್ರೆಸ್ನ ವೈಫಲ್ಯ ಪ್ರಸ್ತಾಪಿಸಿ ಅಥವ ನಿಮ್ಮ ಸಾಧನೆಗಳನ್ನು ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಭಂದ ನಾವು ಬಹಿರಂಗ ಚರ್ಚೆಗೆ ಬರಲು ಸಿದ್ಧರಿದ್ದೇವೆ. ಕೇವಲ ಊಹೆ, ಕಾಲ್ಪನಿಕ ಆಧಾರದ ಮೇಲೆ ನಮ್ಮ ನಾಯಕರ ತೇಜೋವಧೆ ಮಾಡಬೇಡಿ. ಕೇವಲ ಪ್ರಚಾರಕ್ಕೋಸ್ಕರ ಹೇಳಿಕೆಗಳನ್ನು ನೀಡಬೇಡಿ. ಇದೇ ರೀತಿ ಮುಂದುವರಿದರೆ ನಿಮ್ಮ ಮನೆ ಮತ್ತು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ರಾಹುಲ್ ಗಾಂದಿಯನ್ನು ಡ್ರಗ್ ಅಡಿಕ್ಟ್ ಎಂದಿದ್ದಾರೆ. ಹೀಗಾಗಿ ಕಟೀಲ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.
ಬಿಜೆಪಿಯ ಹಲವಾರು ಮುಖಂಡರು ರಾಜ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಯಾರೂ ಕೂಡ ಈ ರೀತಿ ನಾಳಿಗೆ ಹರಿಬಿಟ್ಟಿರಲಿಲ್ಲ. ನಳೀನ್ ಕುಮಾರ್ ಕಟೀಲ್ ಓರ್ವ ಜೋಕರ್ನಂತೆ ವರ್ತಿಸುತ್ತಿದ್ದಾರೆ. ತಾನೊಬ್ಬ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಎಂಬುದನ್ನೇ ಮರೆತಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ, ಸೋನಿಯಾಗಾಂಧಿ ಬೇಲ್ನಲ್ಲಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಹಾಲಿ ಗೃಹ ಮಂತ್ರಿ ಅಮಿತ್ ಷಾ ಜೈಲಿನಲ್ಲಿರಲಿಲ್ಲವೆ?. ನಿಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 29 ದಿನ ಜೈಲಿನಲ್ಲಿರಲಿಲ್ಲವೆ? ರೇಣುಕಾಚಾರ್ಯ, ಹೆಚ್ ಹಾಲಪ್ಪ, ಎಸ್.ಎ.ರಾಮದಾಸ್, ಯತ್ನಾಳ್, ಲಿಂಬಾವಳಿ ಅವರುಗಳ ಮೇಲೆ ಪ್ರಕರಣಗಳು ದಾಖಲಾಗಿಲ್ಲವೆ ಎಂದು ಪ್ರಶ್ನಿಸಿದರು.
ನಿಮ್ಮ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ 7 ವರ್ಷದ ಅವಧಿಯಲ್ಲಿ 84ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಮಾತಿನುದ್ದಕ್ಕೂ ಕಟೀಲ್ ವಿರುದ್ದ ಕಿಡಿಕಾರಿದರು.